ಲೇಖಕರು : ಪದ್ಮಾ ಸುಬ್ಬಯ್ಯ ಪುಟ : 194 ಪರಿವಿಡಿ ಮಡಿಲಿಗೊಂದು ಮಗು
ದತ್ತಕಕ್ಕೆ ಮೊದಲ ಸಿದ್ಧತೆ
ದತ್ತಕದ ನಂತರದ ವಾಸ್ತವಾಂಶಗಳು
ದತ್ತಕದ ಬಗ್ಗೆ ಕಾನೂನಿನ ವಿವರಗಳು
ಕೆಲ ಕುತೂಹಲಕಾರಿ ನೈಜ ಚಿತ್ರಣಗಳು
ದತ್ತಕ: ದಂಪತಿಗಳಿಗೆ ಮಾತ್ರವಲ್ಲ
ವಿದೇಶಿ ದತ್ತಕದ ಒಂದು ಚಿತ್ರಣ
ಕುಲ ಕುಲವೆಂದು ಕೊರಗದಿರಿ
ಪ್ರಶ್ನೆ - ಉತ್ತರ ದತ್ತಕದ ಬಗ್ಗೆ ಹಲವು ತಪ್ಪು ಕಲ್ಪನೆಗಳು ಪರ್ಯಾವಲೋಕನ
ಹೆಣ್ಣಿನ ಸಾರ್ಥಕತೆ ಇರುವುದು ತಾಯಿಯಾಗುವುದರಲ್ಲಿ ಎನ್ನುವ ಮಾತು ಇಂದು ನಿನ್ನೆಯದಲ್ಲ. ಪ್ರತಿಯೊಬ್ಬ ಹೆಣ್ಣಿನ ಬಯಕೆಯೂ ಇದೇ ಆಗಿರುತ್ತದೆ. ಅದಕ್ಕಾಗಿ ಕಾಯುತ್ತಾಳೆ, ಆ ಸಂಭ್ರಮಕ್ಕಾಗಿ ತನ್ನ ಒಡಲಿನ ರಕ್ತವನ್ನೇ ಬಸಿಯುತ್ತಾಳೆ. ಆ ಮುದ್ದು ಮುಖವನ್ನು ನೋಡುತ್ತಾ ತನ್ನೆಲ್ಲ ನೋವನ್ನು ಮರೆಯುತ್ತಾಳೆ. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣಿನ ಬಯಕೆಯ ಹಿಂದೆ ಕುಟುಂಬ ಹಾಗೂ ಸಮಾಜದ ಕಟ್ಟುಪಾಡುಗಳು ನೆರಳಿನಂತೆ ಹಿಂಬಾಲಿಸುತ್ತವೆ. ಸಮಾಜ ಹಾಗೂ ಕುಟುಂಬದವರ ಒತ್ತಾಯಕ್ಕೆ ಮಣಿದು ತಾಯ್ತನವನ್ನು ಹೇರಿಕೊಂಡ ಮಹಿಳೆಯರೂ ನಮ್ಮಲ್ಲಿದ್ದಾರೆ. ಗರ್ಭವತಿಯಿಂದ ಹಿಡಿದು ಮಗು ಹಡೆಯುವ ತನಕ ಅದನ್ನು ಪ್ರೀತಿಯಿಂದ ಆಸ್ವಾದಿಸಿದವರೂ ನಮ್ಮಲ್ಲಿ ಇದ್ದಾರೆ. ತಾಯಿಯಾಗದ ಹೊರತು ಹೆಣ್ಣಿನಲ್ಲಿ ಏನನ್ನೋ ಕಳೆದುಕೊಂಡ ಕೊರಗು ಕಾಡುತ್ತಿರುತ್ತದೆ. ತಾಯಿಯಾಗದ ಹೆಣ್ಣನ್ನು ನಿಕೃಷ್ಟವಾಗಿ ನೋಡುವ ಕಾಲವೂ ಒಂದು ಇತ್ತು.
ಬಂಜೆ ಎನ್ನುವ ಅಪವಾದಕ್ಕೆ ಒಳಗಾಗಲು ಯಾವ ಹೆಣ್ಣು ತಾನೆ ಬಯಸುತ್ತಾಳೆ? ಇಂದಿಗೂ ಆ ಪರಿಸ್ಥಿತಿ ಹಾಗೇ ಇದೆ. ಆದರೆ ಕಾಲ ಬದಲಾದಂತೆ ಹೆಣ್ಣಿನ ಭಾವನೆಗಳಲ್ಲಿಯೂ ಹಲವಾರು ಬದಲಾವಣೆಗಳು ಉಂಟಾಗಿವೆ. ತಾಯ್ತನ ಒಲ್ಲೆ ಎನ್ನುವ ಯುವ ಪೀಳಿಗೆಯ ಹೆಣ್ಣು ಮಕ್ಕಳಿಗೇನೂ ಕೊರತೆ ಇಲ್ಲ. ಹಾಗೆಯೇ ಮದುವೆಯೇ ಇಲ್ಲದೆ ಮಗುವನ್ನು ಪಡೆಯಲು ಬಯಸುವ ಹೆಣ್ಣುಗಳೂ ನಮ್ಮಲ್ಲಿ ಇಂದು ಕಾಣಸಿಗುತ್ತಾರೆ. ಏನೇ ಆಗಲಿ, ಮಡಿಲಲ್ಲಿ ಒಂದು ಮಗುವನ್ನು ಕಟ್ಟಿಕೊಂಡು ಅಪ್ಪಿ ಮುದ್ದಾಡುವ ಸಂತಸ ಎಲ್ಲರಿಗೂ ಬೇಕು. ತಾಯ್ತನವನ್ನು ಮಕ್ಕಳನ್ನು ಹಡೆದೇ ಅನುಭವಿಸಬೇಕೇನು ಎಂದು ಪ್ರಶ್ನಿಸುವ ಕಾಲದಲ್ಲಿ ಇಂದು ನಾವಿದ್ದೇವೆ. ಮಗುವೊಂದನ್ನು ದತ್ತು ತೆಗೆದುಕೊಂಡು ಅದನ್ನು ಸಾಕುವುದರಲ್ಲೇ ತಾಯ್ತನವನ್ನು ಕಾಣುವ ಉದಾತ್ತ ಹೆಂಗಸರೂ ಇದ್ದಾರೆ. ಮತ್ತೆ ಕೆಲವರಿಗೆ ತಾಯಿಯಾಗುವ ಆಸೆ ಕೈಗೂಡುವುದೇ ಇಲ್ಲ. ಅದಕ್ಕಾಗಿ ಅಂತಹವರು ಪರಿತಪಿಸುತ್ತಾ ಕೂಡುವ ಬದಲು ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೊಂದು ಜೀವನಾಧಾರ ಕಲ್ಪಿಸುವುದು ಒಂದು ಒಳ್ಳೆಯ ಧ್ಯೇಯ. ಒಂದು ಕಾಲದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಹಿಂದು ಮುಂದು ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳನ್ನು ಅದರಲ್ಲೂ ಹಸಗೂಸುಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಕಾನೂನಿನ ಅನುಕೂಲತೆಗಳನ್ನು ಎಲ್ಲರಿಗೂ ಅನ್ವಯವಾಗುವಂತೆ ರೂಪಿಸಿರುವುದು. ಇದರಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದವರೂ ಇಂದು ಆ ಕುರಿತು ಧೈರ್ಯದಿಂದ ಮುನ್ನುಗ್ಗುವಂತಹ ವಾತಾವರಣ ನಿರ್ಮಾಣಗೊಂಡಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಮಗುವೊಂದನ್ನು ದತ್ತು ತೆಗೆದುಕೊಳ್ಳುವ ಮುನ್ನ ಕೆಲವು ವಿಷಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಮೊದಲು ಮಗುವೊಂದನ್ನು ದತ್ತು ತೆಗೆದುಕೊಳ್ಳಲು ಆ ಮಗುವಿಗೆ ತಂದೆ, ತಾಯಿ ಆಗಬೇಕಾದವರ ಸಹಮತ ಇರಬೇಕಾಗುತ್ತದೆ. ಯಾರೋ ಒಬ್ಬರ ಒತ್ತಾಯಕ್ಕೆ ಮಣಿದು ಮಗುವನ್ನು ದತ್ತು ತೆಗೆದುಕೊಂಡಲ್ಲಿ ಆ ಬಳಿಕ ದುಷ್ಪರಿಣಾಮ ಉಂಟಾಗುವುದು ಮಗುವಿನ ಮೇಲೆಯೇ ಹೊರತು ತಂದೆ, ತಾಯಿಗಳಿಗಲ್ಲ. ಹಾಗೆ ದತ್ತು ತೆಗೆದುಕೊಳ್ಳುವವರು ವಿಭಕ್ತ ಕುಟುಂಬದವರಾಗಿದ್ದರೆ ಅಲ್ಲಿ ಹೆಚ್ಚು ಸಮಸ್ಯೆಗಳು ಉದ್ಭವಿಸುವುದಿಲ್ಲ. ಅವಿಭಕ್ತ ಕುಟುಂಬದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗ ಕುಟುಂಬದ ಪ್ರಮುಖರ, ಸಹ ಸದಸ್ಯರ ಅನುಮತಿ ಪಡೆಯುವುದೂ ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಇದರ ಜೊತೆಗೆ ಆ ಮಗುವನ್ನು ಅವರೂ ಕೂಡ ತಮ್ಮದೇ ಮಗು ಎಂದು ಪ್ರೀತಿಯಿಂದ ಕಾಣಬೇಕಾದ ಗುಣ ಸ್ವಭಾವವೂ ಅಗತ್ಯ. ಎಲ್ಲವೂ ಸರಿಯಾಗಿದ್ದರೆ ಮಾತ್ರ ಆ ಕುಟುಂಬದಲ್ಲಿ ಮಗು ಎಲ್ಲರಂತೆ ಬದುಕಲು ಸಾಧ್ಯವಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಅವಿಭಕ್ತ ಕುಟುಂಬಗಳು ಬಹುತೇಕ ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಕೂಡ ತಾವು ಸ್ವತಂತ್ರವಾಗಿ ಬದುಕಬೇಕು ಎಂಬ ಕನಸು ಕಾಣುತ್ತಿದ್ದಾರೆ. ಹಾಗೆಯೇ ಮಗುವಿನ ವಿಚಾರದಲ್ಲಿಯೂ ಅವರದೇ ಆದ ಕೆಲಸಗಳು ಇರುವುದು ಸಹಜ. ಆದರೆ ಕಲ್ಪನೆಗಳು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗಬಾರದು. ಸಾಮಾನ್ಯವಾಗಿ ಸ್ವಂತ ಮಗು ಹಾಗೂ ದತ್ತು ಮಗುವಿನ ನಡುವೆ ಭೇದ, ಭಾವ ತೋರುವುದು ಸಹಜ ಎನ್ನುವ ಭಾವನೆ ಎಲ್ಲರಲ್ಲಿಯೂ ಮನೆ ಮಾಡಿದೆ. ಎಲ್ಲೋ ಕೆಲವು ಸಂದರ್ಭಗಳಲ್ಲಿ, ಕೆಲವು ಸನ್ನಿವೇಶಗಳಲ್ಲಿ ಇಂತಹ ಪರಿಸ್ಥಿತಿ ಇರುವುದು ಅನಿವಾರ್ಯ. ಆದರೆ ಅದನ್ನೇ ಸತ್ಯ ಎಂದು ಬಯಸುವುದು ತಪ್ಪು. ಮಗುವೊಂದನ್ನು ದತ್ತು ತೆಗೆದುಕೊಳ್ಳುವಾಗ ಇರುವ ಆಸ್ಥೆ ಮಗುವನ್ನು ಮುಂದೆ ಬೆಳೆಸುವಾಗಲೂ ಇರಬೇಕಾಗುತ್ತದೆ. ಇದು ನನ್ನ ಮಗು, ಯಾವ ಕೊರಗೂ ಇಲ್ಲದೆ ಬೆಳೆಯಲು ಸಾಧ್ಯ. ಆದರೆ ಬಹುತೇಕ ಸಂದರ್ಭಗಳಲ್ಲಿ ಎಲ್ಲೋ ಒಂದು ಕಡೆ ಈ ಮಗು ನನ್ನದಲ್ಲ ಎನ್ನುವ ಭಾವನೆ ದತ್ತು ಸ್ವೀಕರಿಸಿದವರನ್ನು ಕಾಡುತ್ತಿರುತ್ತದೆ. ಆ ಮನೋಭಾವದಿಂದ ಹೊರ ಬಂದು ಆ ಮಕ್ಕಳನ್ನು ಪ್ರೀತಿಯಿಂದ ಕಂಡು ತಾವು ತಿನ್ನುವ ಆಹಾರ, ಉಡುವ ಬಟ್ಟೆಯನ್ನು ಅವಕ್ಕೂ ಹಂಚಿಕೊಟ್ಟಾಗ ಆ ಮಕ್ಕಳೂ ಎಲ್ಲ ಮಕ್ಕಳಂತೆ ಬೆಳೆಯುತ್ತವೆ. ಅತಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ದತ್ತು ತೆಗೆದುಕೊಂಡಾಗ ಆ ಮಗುವಿಗೆ ತನ್ನ ತಂದೆ, ತಾಯಿ ಯಾರು ಎನ್ನುವ ಅರಿವು ಕೂಡ ಇರುವುದಿಲ್ಲ. ಆದರೆ ಆ ಮಗು ಬೆಳೆದಂತೆಲ್ಲ ತಾನು ಮನೆಗೆ ಹೊರತಾದವನು ಎನ್ನುವ ಭಾವನೆ ಬಾರದ ರೀತಿಯಲ್ಲಿ ಆ ಮಗುವನ್ನು ಬೆಳೆಸುವ ಹೊಣೆಗಾರಿಕೆ ತಂದೆ, ತಾಯಿಗಳಿಗೆ ಇರಬೇಕಾಗುತ್ತದೆ. ಮಗುವನ್ನು ದತ್ತು ತೆಗೆದುಕೊಳ್ಳಬೇಕಾದ ಸಮಯದಲ್ಲಿ ಇವೆಲ್ಲವುಗಳ ಬಗ್ಗೆ ಚಿಂತಿಸಬೇಕಾದದ್ದು ಅತ್ಯಗತ್ಯ. ಕಾಲ ಹೇಗೆ ಓಡುತ್ತದೋ ಹಾಗೆ ನಾವು ಅದರ ಬೆನ್ನು ಹತ್ತಿ ಹೋಗಬೇಕಾಗುವುದು ಅನಿವಾರ್ಯ. ಬದಲಾಗುತ್ತಿರುವ ಇಂದಿನ ಕಾಲದಲ್ಲಿ ಗಂಡ, ಹೆಂಡತಿ ಇಬ್ಬರೂ ದುಡಿಯುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಡು ದುಡಿಯುವುದಕ್ಕೆ, ಹೆಣ್ಣು ಹಡೆಯುವುದಕ್ಕೆ ಎನ್ನುವ ಕಾಲ ಇಂದು ಸಂಪೂರ್ಣ ಬದಲಾಗಿದೆ. ಗಂಡ, ಹೆಂಡತಿ ಇಬ್ಬರೂ ಹೀಗೆ ದುಡಿಯುವುದಕ್ಕೆ ಹೋದಾಗ ಮಕ್ಕಳ ಬಗ್ಗೆ ಚಿಂತಿಸುವುದಕ್ಕೆ ಸಮಯವಾದರೂ ಅವರಿಗೆ ಎಲ್ಲಿಂದ ಬಂದೀತು ಎನ್ನುವ ಪ್ರಶ್ನೆ ಏಳುವುದು ಸಹಜ. ಆ ಕಾರಣಕ್ಕಾಗಿ ಮಕ್ಕಳೇ ಬೇಡ ಎನ್ನುವಂತಹ ವಾತಾವರಣವೂ ಕೆಲವು ಕುಟುಂಬಗಳ ಸಂದರ್ಭಗಳಲ್ಲಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹಡೆಯಬೇಕೇ ಅಥವಾ ಮಗುವೊಂದನ್ನು ದತ್ತು ಪಡೆದು ಸಾಕುವುದು ಉಚಿತವೇ ಎನ್ನುವ ಪ್ರಶ್ನೆಗಳೂ ಇತ್ತೀಚಿನ ಪರಿಸ್ಥಿತಿಯಲ್ಲಿ ಏಳುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎರಡು ಬಗೆಯ ಚಿಂತನೆಗಳು ಸದ್ಯ ಹೊರ ಬಂದಿವೆ. ಒಂದು ಚಿಂತನೆಯ ಪ್ರಕಾರ ಮಗುವನ್ನು ದತ್ತು ತೆಗೆದುಕೊಳ್ಳುವುದು ಉತ್ತಮ. ಆದರೆ ಹಾಗೆ ದತ್ತು ತೆಗೆದುಕೊಂಡ ಮಗುವನ್ನು ಸಾಕುವವರು ಯಾರು? ಆ ಮಗುವಿಗೆ ಹೊಣೆ ಯಾರು? ಇದರಿಂದ ಮುಂದೆ ಆ ಮಗುವಿನ ಮೇಲೆ ಬೀರಬಹುದಾದ ಪರಿಣಾಮಗಳು ಎಂಥವು ಇವೇ ಮೊದಲಾದ ಪ್ರಶ್ನೆಗಳನ್ನು ಎರಡನೆಯ ಪ್ರಕಾರದ ಚಿಂತಕರು ಮುಂದಿಡುತ್ತಿದ್ದಾರೆ. ಈ ಬಗೆಯ ಚಿಂತನೆಗಳು ಸಹಜ. ದತ್ತು ಮಗುವಿನ ವಿಚಾರದಲ್ಲಿ ಮಾತ್ರ ಎಲ್ಲ ಮಕ್ಕಳನ್ನು ಹಡೆದವರ ವಿಚಾರದದಲ್ಲಿಯೂ ಇದು ಸಹಜ. ತಾನೇ ಹಡೆದ ಮಗುವನ್ನು ತಾಯಿ ಎಷ್ಟು ಮುತುವರ್ಜಿಯಿಂದ ಸಾಕುತ್ತಾಳೋ ಅಷ್ಟೇ ಮುತುವರ್ಜಿಯಿಂದ ತಾಯಿಯಾದವಳು ದತ್ತು ಸ್ವೀಕರಿಸಿದ ಮಗುವನ್ನೂ ಸಾಕಿ ಸಲಹುತ್ತಾಳೆ. ಆದರೆ ವಿನಾಕಾರಣ ಈ ವಿಚಾರವನ್ನು ದೊಡ್ಡದು ಮಾಡಿ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ಈ ಬಗ್ಗೆ ಆಳವಾದ ಚಿಂತನೆ ನಡೆದಾಗ ಮಾತ್ರ ಇಂತಹ ಗೊಂದಲಗಳಿಂದ ಹೊರಬರಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಮಗು ಯಾವುದಾದರೇನು ಅದು ನನ್ನ ಮಗು ಎಂದು ಪ್ರೀತಿಯಿಂದ ಕಾಣುವ ಮನೋಭಾವ ಬರಬೇಕು. ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ.
0 Comments
Leave a Reply. |
Archives
September 2020
Categories
All
|
Site |
Vertical Divider
|
Major ServicesOur Other Websites |
Vertical Divider
|
Training ProgrammesContact Us
|
Receive email updates on the new books & offers for the subjects of interest to you.
|
Copyright :MHRSPL-2020, website designed and developed by :www.socialworkfootprints.org